ಯಾರಿಗೆ ಯಾರುಂಟು ಎರವಿನ ಸಂಸಾರ (ಒಂದು ಚಿಂತನ)
ನಾವು ಬಯಸಿದಂತೆ ಸಮಾಜ ಇರಬೇಕೆ ? ನಾವು ನಿಶ್ಚಯಿಸಿದ್ದೇ ಆಗಬೇಕೆಂದರೆ ಹೇಗೆ ?
ನಾವು ಬಯಸಿದಂತೆ ಎಲ್ಲರೂ ಇರಹೊರಟರೆ , ನಮ್ಮ ನಿರ್ಧಾರಗಳಿಗೆ ಎಲ್ಲರು ತಲೆದೂಗ ಹೊರಟರೆ , ನಾವು ದೇವರೇ ಆಗಿಬಿಡುವೆವು ಅಲ್ಲವೆ ?
ಇವರು ಹಾಗೆ ಮಾಡಬೇಕಿತ್ತು , ಅವರು ಇದನ್ನು ಹೇಳಬೇಕಿತ್ತು ಎಂದು ನಮ್ಮ ಮನಸ್ಸು ಬಯಸುವುದಾದರೂ ಏಕೆ ?
ನಾವು ಬಯಸಿದಂತೆ ಎಲ್ಲವೂ ಆಗಿ ಈಗಿರುವ ಸ್ಥಿತಿಗಿಂತಲೂ ಹದಗೆಟ್ಟ ಸ್ಥಿತಿಯಲ್ಲಿ ನಾವು ಸಿಲುಕಿಬಿಟ್ಟರೇ ... ಯಾರು ಬಲ್ಲರು ?
" ಅವಶ್ಯಕತೆ ಇದ್ದಲ್ಲಿ ಅವಶ್ಯವಾಗಿ ಇರಬೇಕಾದವರನ್ನು ಭಗವಂತ ಕರುಣಿಸುತ್ತಾನೆ "
ಇತರರು ಮಾಡುವ ಕಾರ್ಯಗಳಾಗಲಿ , ಪೇಳುವ ನುಡಿಗಳಾಗಲಿ ಅವರವರ ವ್ಯಕ್ತಿತ್ವಕ್ಕೆ ಬಿಟ್ಟದ್ದು . ಇವರು ನನ್ನ ಜೊತೆ ಸರಿಯಾಗಿ ವರ್ತಿಸಲಿಲ್ಲ, ಪ್ರೀತಿಯಿಂದ ನುಡಿಯಲಿಲ್ಲ , ಅವರು ನನ್ನನ್ನು ಕೀಳಾಗಿ ಕಂಡು ಹೀಯಾಳಿಸಿ ಜರಿದರು , ಬೆನ್ನ ಹಿಂದೆ -ಮುಂದೆ ಏನೋ ಹೇಳಿದರು . . .
ಇದೆಲ್ಲದರ ಚಿಂತೆ ನಮಗ್ಯಾಕೆ ? ನಾವು ಮಾಡಿದ ಕಾರ್ಯ- ಪೇಳ್ವ ನುಡಿ ನಮ್ಮನ್ನು ಬಿಂಬಿಸುತ್ತದೆ . ನಾವು ಇತರರ ಬಗ್ಗೆ ಏನು ಯೋಚಿಸಿದೆವು , ಏನು ಆಡಿದೆವು , ಅವರನ್ನು ನೋಯಿಸುವಂತ ಕಾರ್ಯವ ಮಾಡಿದೆವಾ ... ಇದೆಲ್ಲದರ ಚಿಂತನ -ಅವಲೋಕನ ಮುಖ್ಯ ಹಾಗು ಅವಶ್ಯ . ಏಕೆಂದರೆ , "ನೆಮ್ಮದಿ" ಎಂಬುದು ನಾವು ಮಾಡುವ ಕಾರ್ಯ - ಯೋಚನಾಲಹರಿಯಲ್ಲಿಯೇ ಅಡಗಿದೆ. ನಮ್ಮ ವ್ಯಕ್ತಿತ್ವದಿಂದ ನಾವು ಸಂತುಷ್ಟರೇ , ನಮ್ಮನ್ನು ಸ್ವತಃ ನಾವೇ ಒಪ್ಪಿಕೊಳ್ಳಲು , ಪ್ರೀತಿಸಲು , ಗೌರವಿಸಲು ಸಾಧ್ಯವಾದರೆ ಬೇರೆಲ್ಲವೂ ನಮಗೆ ಗೌಣವಾಗಿಬಿಡುತ್ತದೆ.
ಕಷ್ಟಗಳು ಒಂದಾದ ಮೇಲೊಂದು ಮುಗ್ಗರಿಸಿ ಬಂದು ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲವಾಗಿಸಿದಾಗ ನಮಗೆ ಸಹಾಯ ಮಾಡಲು ಯಾರಿಲ್ಲ ಎಂದೇಕೆ ಮನಸ್ಸು ಸಣ್ಣ ಮಾಡಿಕೊಳ್ಳಬೇಕು ? ಆಗುವುದೆಲ್ಲ ದೈವಚಿತ್ತ - ಆ ಸನ್ನಿವೇಶವನ್ನು ಒಬ್ಬಂಟಿಯಾಗಿ ಎದುರಿಸುವ ,ಜಯಿಸುವ ಸಾಮರ್ಥ್ಯ ನಮಗಿದೆ ಎಂದು ದೇವರೇ ನಮ್ಮ ಮೇಲೆ ವಿಶ್ವಾಸ ಇಟ್ಟಾಗ ನಮ್ಮ ಮೇಲೆ ನಮಗೇಕೆ ಅಪನಂಬಿಕೆ ?
ನಾವೆಲ್ಲರು ಪರಿಸ್ಥಿತಿಯ ಕೈಗೊಂಬೆಗಳು.ಬದುಕು ಹಲವು ರೀತಿಯ ಸಂದರ್ಭಗಳ ಅಚ್ಚುಗಳನ್ನು ನಮಗೆ ಕೊಡುತ್ತಾ ಪರೀಕ್ಷಿಸುತ್ತದೆ . ಸನ್ನಿವೇಶಕ್ಕೆ ತಕ್ಕಂತೆ ನಾವು ಯೋಚಿಸುವ ಪರಿ, ನಾವು ಕೈಗೊಳ್ಳುವ ನಿರ್ಧಾರ , ಸಾಗುವ ದಾರಿ ನಿರಂತರ ಬದಲಾಗುತ್ತಾ ಹೋಗುತ್ತದೆ . ಖುಷಿಯಲ್ಲಿ , ದುಃಖದಲ್ಲಿ , ಆರೋಗ್ಯದಲ್ಲಿ , ಅನಾರೋಗ್ಯದಲ್ಲಿ - ಪ್ರತಿ ಕ್ಷಣ ಸಂದರ್ಭಕ್ಕನುಸಾರವಾಗಿ ನಮ್ಮ ನಿರ್ಧಾರಗಳು ರೂಪಾಂತರವಾಗುತ್ತಿರುತ್ತವೆ. ನಮ್ಮ ವಿವೇಕಕ್ಕೆ ಸರಿ ಹಾಗು ಯೋಗ್ಯ ವೆನಿಸಿದ್ದನ್ನು ,ಕೆಲವೊಮ್ಮೆ ಎದೆಗುಂದದೆ ತಲೆ ಎತ್ತಿ , ಮಗದೊಮ್ಮೆ ಕುಗ್ಗದೆ ತಲೆ ಬಾಗಿ ಮನಸ್ಸಿಗೆ ತೃಪ್ತಿ ನೀಡುವಂತಹ ಉತ್ತಮ ನಿರ್ಧಾರ - ಕಾರ್ಯ ನಮ್ಮದಾಗಿರಬೇಕು. ತಪ್ಪು ಮಾಡಿ - ಅರಿವು ಮೂಡಿದಾಗ ಪಶ್ಚಾತಾಪದ ಹಾದಿ ತುಳಿಯಬೇಕು . ಅನುಭಗಳಿಂದ ಬುದ್ಧಿ ಕಲಿಯುತ್ತ ಮನವನ್ನು ಕದಡದಂತೆ ಜಾಗೃತವಹಿಸಬೇಕು .ಆಗಲೇ ನಮ್ಮ ಸಂಪೂರ್ಣ ವಿಕಸನ ಸಾಧ್ಯ .
ಆದದ್ದೆಲ್ಲಾ ಒಳಿತೇ ಆಯಿತು , ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ಎಂದು ಸತ್ಯಪಥದಲ್ಲಿ ನಗುಮೊಗದಿಂದ ಬಾಳ್ವೆ ನಡೆಸುವುದಷ್ಟೇ ನಮ್ಮ ಹೊಣೆ .
ಹುಡುಗಾಟವಲ್ಲ ಜತನವು ಈ ಬಾಳು
ಕರುಣೆಯ ಮರೆಯದಿರು , ಕರ್ತವ್ಯದಲಿ ದಿಟವಾಗಿರು . . .
ಕರುಣೆಯ ಮರೆಯದಿರು , ಕರ್ತವ್ಯದಲಿ ದಿಟವಾಗಿರು . . .
ಆದರ್ಶಗಳೇ ಹಳಿಯಾಗಲಿ , ಕನಸುಗಳೇ ಬೆಳಕಾಗಲಿ
ಕವಲೊಡೆಯದೇ ,ಹಳಿ ತಪ್ಪದೇ ಸತ್ಯದಲಿ ಸಾಗುತಿರು ನೀನು,
ಮುಟ್ಟುವೆ ನಿನ್ನ ಧ್ಯೇಯವ
ಸಾರ್ಥಕವು ಆಗ ನಿನ್ನ ಬಾಳು
-ಪ್ರಜ್ಞಮಾಲಾ
0 comments:
Post a Comment