Sunday 30 March, 2014

ತಮಿಳಿನ ಪ್ರಸಿದ್ಧ ಕವಿ " ವಾಲೀ " ಯವರ "ನಾನ್ ಏನ್ " ಕವಿತೆಯಿಂದ ಸ್ಫೂರ್ತಿಯಾದುದು . . . ಅಂತಹ ಅದ್ಭುತ ಕವಿತೆಯನ್ನು ಕೇಳಿಸಿ , ಅರ್ಥ ತಿಳಿಸಿದ ರಮೇಶ್ ಸರ್ ಗೆ ನನ್ನ ಮನದಾಳದ ವಂದನೆಗಳು . . .



ಇಹುದು ಅಲ್ಲೊಂದು ಸುಂದರ ನಾಡು ,
ಪ್ರೀತಿ ,ಮುಗ್ಧತೆಯ ಬೀಡು . . . 

ಕಣ್ತಣಿಸುವ ಹಸಿರ ಸಾಲು ,
ಹರಿವ ನದಿಯ ಇಂಪಾದ ಹಾಡು,
ಆ ತಂಪು ಗಾಳಿ ,   
ಕುಣಿದು -ನಲಿಯುತಿಹ  ವನ್ಯ ಜೀವಿ  . . . 

ಇಹುದು ದೂರ -ಬಹು ದೂರದಲ್ಲೊಂದು ಸುಖದ ಬೀಡು,
ಕಲ್ಮಶಗಳೇ ಅರಿಯದ   ಸ್ವಚ್ಛಂದ ನಾಡು . . .

ಅಳದಿರು ನನ ಕಂದಾ . . . 
ಮಲಗೋ ನನ ರನ್ನ . . .
ಇಹುದು ದೂರದಲ್ಲೊಂದು ವಿಸ್ಮಯಗಳ  ನಾಡು . . .

ಕಾರಣವ ಅರಿಯದ ಹುಟ್ಟು ನಮದು,
ಏಕೆ , ಏನೆಂದು ಗುರಿ ಇಲ್ಲದೇ ಸಾಗುತಿಹೆವು ನಾವು . . . 

ಹುಟ್ಟಿದ ಮಗುವಿನಲಿ  ದೋಷವೆಲ್ಲುಂಟು . . . ? 
ಹಸುಗೂಸು, ನಿನ್ನ ತೆಗಳಿದರೆ ಏನು ಬಂತು . . . 

ಬೆಳೆದ ಬಿದಿರ ರಂಧ್ರಗಳೇ ,ಅದರ ಗಾನದ  ಮೂಲ,
ಬೆಳೆಯುತಾ ಕಲಿತ ಪಾಠಗಳೇ ನಿನ್ನ ಬಾಳಿನ  ಮೂಲ . . .

ಕರಿಮೋಡಗಳೇ  ಆಸರೆ ವಸುಧೆಯ ಜೀವಕೆ,
ಬರಡು ಮರವೇ ನಾಂದಿ ನವ ಋತುಮಾನಕೆ . . . 

ಅಳದಿರು ನನ ಕಂದಾ  . . . 
ಮಲಗೋ ನನ ರನ್ನ . . .
ಇಹುದು  ಅಲ್ಲೊಂದು   ಸುಂದರ ನಾಡು ,
ನೆಮ್ಮದಿಯ ಬೀಡು . . .


ಹುಟ್ಟು - ಸಾವಿನ ನಡುವಲ್ಲಿ ಇಹುದು ಸಣ್ಣ ವಿರಾಮ,
ಆ  ವಿರಾಮದಲ್ಲೇ  ಅಡಗಿಹುದು ಈ ಜೀವನ . . . 
ಕಾರಣಗಳ ಒಗಟನ್ನು ಬಿಡಿಸೆ ,
 ಅನುಭವಿಸುವೆ ನೀ ಸಾರ್ಥಕತೆಯನ್ನ ,
ಇದರ ಸಾರವನ್ನ  . . . 

ದೇವನ ಪ್ರತಿ ಸೃಷ್ಟಿಯೂ ರೋಚಕ,
 ಅಡಗಿಹುದು ಪ್ರತಿಯೊಂದರಲೂ  ಸೌಂದರ್ಯ . . . 
ಈ ಕಣ್ಣುಗಳು ಸೋತಿಹುದು ಅರಿಯಲು 
ಅವನ  ಮರ್ಮವನ್ನ . . . 

ಕಣ್ತೆರೆದ ಕಾರಣವೇನು . . . ?
ಈ ಇರುವಿಕೆಯ ಧ್ಯೇಯವೇನು  . . . ?
ಪ್ರಶ್ನೆಗಳ  ಸುಳಿವಲ್ಲೇ ಅಲೆಯುತಿಹೆವು ನಾವು 


ಅಳದಿರು ನನ ಕಂದಾ  . . . 
ಮಲಗೋ ನನ ರನ್ನ . . .
ಇಹುದು  ಅಲ್ಲೊಂದು ಸುಂದರ ನಾಡು,
ನಲ್ಮೆಯ ಬೀಡು . . . 

ಕರುಣೆಯ ಕಡಲಿಹುದು ,
ಆದರ್ಶಗಳ ನೆಲೆ ಇಹುದು,
ಪ್ರೀತಿ - ವಿಶ್ವಾಸಗಳೇ  ತುಂಬಿಹುದು,
ದೂರದಲ್ಲಿಹುದು ಆ ನೆಮ್ಮದಿಯ  ಗೂಡು . . .   

ಅಳದಿರು ನನ ರನ್ನ . . . 
ಮಲಗೋ ನನ ಕಂದಾ . . .
ವಿಹರಿಸು, ಆನಂದಿಸು  ವಿಸ್ಮಯದ ಸವಿ-ನಾಡಲ್ಲಿ ,
ಕನಸುಗಳ ಆ ಸುಂದರ ಬೀಡಲ್ಲಿ  . . . 

ಮಲಗೋ ನನ ಕಂದಾ ... ಓ ನನ ಚಿನ್ನಾ . . . 
ಮಲಗೋ ನನ ಕಂದಾ ... ಓ ನನ ರನ್ನಾ . . . 

-ಪ್ರಜ್ಞಮಾಲಾ 

  

Saturday 15 March, 2014

ಇನಿಯ

ಇನಿಯ
ಕಾಣದ ನಿನಗೆ ಈ ಮನ ಕಾಯುತಿದೆ ,
ಕಾಯುತಿರುವ ಮನವು ಕನಸುಗಳಲಿ ಲಹರಿಸುತಿದೆ ,
ಲಹರಿಯ ಸಿಂಚನ ಮೊಗವ ಅರಳಿಸಿದೆ,
ಅರಳಿದ ಕಂಗಳು ನಿನ್ನನೇ ಅರಸುತಿವೆ . . .
 ಬಂದು ಬಿಡು ಬೇಗ ,
ತೋರಿಬಿಡು ನಿನ್ನ ಒಲವ ,
ಕನಸುಗಳ ನನಸಾಗಿಸಿ ,
ಬೆಳಗಿಸು ನನ್ನ ಬಾಳ . . .