Thursday, 12 September 2013

ಭೂತಾಯಿ



"ಭೂತಾಯಿ "


ಪ್ರಶಾಂತತೆಯ ಮಡಿಲು ಅವಳದು ,
ನೀರವತೆಯ ನಡುವೆ ಶಬ್ದ -ಸಿರಿಯು ಅವಳದು ,
ಜಗಕೆಲ್ಲಾ ನಿರಂತರ ಚೇತನ-ಶಕ್ತಿ,ವಿಶ್ವರೂಪ ಅವಳದು... 

ಗಡಿಬಿಡಿಯ ಈ ಕಪಟ ಸಂತೆಯಲಿ , 
ಕಾಂಚಾಣದ ಮಹಿಮೆ ಎಲ್ಲೆಡೆಯೂ ,ಎಲ್ಲರಲೂ ಬೇರೂರಿ ಕುಣಿಯುತಿಹುದು,
ದಾಹ ದುರಾಸೆಗಳ ಜಾಲದಲಿ ಹುಚ್ಚನಾಗಿಸಿಹುದು ಪ್ರತಿ ಮನುಜನನು,
 ಮೈಯೆಲ್ಲಾ ಮುತ್ತಿ,ಕಿತ್ತು-ಕಸಿದು-ಹಂಚಿ ತಿನ್ನುತ್ತಿದ್ದರೂ ,
ಮಾನವನ ಅಗಣಿತ ಅವಮಾನಗಳ ಹೊರೆಯಲಿ 
ಬೇಯುತಿಹಳು ಅವಳು. . . 



ಮಾನವನ ವಿಕೃತ -ವಿಕಟ ಆಟಗಳೆಲ್ಲವನು ,
ತನ್ನೆಲ್ಲಾ ಆಕ್ರಂದನವನು ಸಹಿಸುತ ಸ್ತಬ್ಧಳು ಅವಳು

ಉರುಳುತಿಹ ಗಾಲಿಗಳು , 
ಹೊಗೆಯುಗುಳುತಾ ಚೀರುತಿಹ ಯಂತ್ರಗಳು ,
ಕುಕ್ಕುವ ನೋಟಗಳು
ತನ್ನೊಡಲ ಬಗೆಯುತಿರೆ ,
ಭಾವರಹಿತ ನಗುವ ಕಂಗಳಲಿ ತುಂಬಿ, 
ದಣಿದು- ಬಳಲಿದರೂ , ತನ್ನೆಲ್ಲಾ ಸತ್ವವ ಹೀರಿ ರಾರಾಜಿಸಿದರೂ 
ಕ್ಷಮಿಸುತಿಹಳು ಪ್ರತಿ ಬಾರಿಯೂ . . .

ಸೆಟೆದು ನಿಂತರೆ ಆಕೆ ,
ಕೋಪದಲಿ ಕಂಪಿಸಿದರೆ ಒಮ್ಮೆ ,
ದಾಳ ಬೀಸಿದರೆ ಆಕೆ ,
ಧೂಳಿಪಟವು ಮಾನವನ ಆಟಗಳೆಲ್ಲವೂ . . . 

ಒಡಲ ಬಿಸಿಯಲಿ ತತ್ತರಿಸುವ ,
ದೈನ್ಯನೋಟದಲಿ ಬೇಡುವ ಸರದಿ ಮಾನವನದು ಆಗ ,
ಬರಡು ಮನಕೆ ಕುರುಡು ಭಾವಗಳು ಎಂತು ಆಸರೆಯಾಗಬಲ್ಲವು ,
ಎಸಗಿದ ಪಾಪ-ಕರ್ಮಗಳೆಲ್ಲವೂ ರಕ್ಷಿಸದು ಅಂದು . . . 


ಮುಕ್ತಳಾಗುವಳು ತಾಯಿ,
ನಿರ್ವಾಣ ಹಬ್ಬುವುದು ಎಲ್ಲೆಡೆಯೂ ,
ಚಿಗುರುವುದು ಹೊಸ ಚಿಗುರು , 
ಉದಯಿಸುವುದು ಹೊಸ ಪರ್ವವು . . . 

ದುರಾಲೋಚನೆಯ ನಡುವೆ ದೂರಾಲೋಚನೆಯ ಸಮಯವಿದು ,
ಸಂರಕ್ಷಣೆಯ ಹಾದಿಯ ಈಗ ತುಳಿಯದಿರೆ ,
ಅಂತ್ಯ-ರಾಗದ ಜೋಗುಳವ ಹಾಡುತಾ , ನಿಪಾತಕೆ ತಳ್ಳುವಳು 
ರಕ್ಷಕಿಯು , ಸಲಹಿ-ಪೋಷಿಸಿದ ಮಾತೆಯು,
ಚಂಡಿ -ಭಕ್ಷಕಿ ಆಗುವಳು ಆಗ . . . 
-ಪ್ರಜ್ಞಮಾಲಾ




0 comments:

Post a Comment